Menu

ಪಂಚಾಂಗ ಒಂದು ಮಾಹಿತಿ

ಪಂಚಾಂಗವೆಂದರೆ ತಿಥಿ, ವಾರ, ನಕ್ಷತ್ರ, ಯೋಗ, ಕರಣವೆಂಬ ಐದು ಅಂಗಗಳಿಂದ ಕೂಡಿರುವುದು ಎಂದರ್ಥ. ಇವು ಕಾಲಗಣನೆಯ ಪ್ರಮುಖ ಅಂಗಗಳಾಗಿರುತ್ತದೆ.

ಪ್ರತಿ ನಿತ್ಯವೂ ಈ ಐದು ಅಂಗಗಳನ್ನೊಳಗೊಂಡು ರಚಿತವಾದ ಪುಸ್ತಕರೂಪವೇ ಪಂಚಾಂಗ ಎನ್ನಬಹುದು. ಇದು ಅಲ್ಲದೇ ಹಬ್ಬ ಹರಿದಿನಗಳು, ಗ್ರಹಣಗಳು , ಉಪಯುಕ್ತ ಧರ್ಮಶಾಸ್ತ್ರ ವಿಚಾರಗಳು ಹಾಗೂ ಜೋತಿಷ್ಯ ಫಲಶಾಸ್ತ್ರವು ಕೂಡ ಪಂಚಾಂಗ ಪುಸ್ತಕದ ಪ್ರಮುಖ ಭಾಗವಾಗಿರುತ್ತದೆ.

ತಿಥಿ; ಪಕ್ಷ; ಚಾಂದ್ರಮಾಸ:
ಸದಾ ಸಂಚಾರಶೀಲನಾಗಿರುವ ಸೂರ್ಯ ಮತ್ತು ಚಂದ್ರರ ಅಂತರವನ್ನು ತಿಥಿಯೆಂಬುದಾಗಿ ಕರೆಯುತ್ತಾರೆ. ಸೂರ್ಯಚಂದ್ರರು ಜೊತೆಗಿರುವುದೇ ಅಮಾವಾಸ್ಯೆ ಎಂದು ಹೆಸರು. ಚಾಂದ್ರಮಾಸದ ಕೊನೆಯದಿನ ಅಂದರೆ ಅಮಾವಾಸ್ಯೆಯಂದು ಸೂರ್ಯಚಂದ್ರರು ಜೊತೆಗಿರುತ್ತಾರೆ.
ಅಮಾವಾಸ್ಯೆಯಂದು ಒಂದಾದ ಸೂರ್ಯಚಂದ್ರರು ಪೂರ್ವ ದಿಕ್ಕಿನಲ್ಲಿ ಚಲನೆಯನ್ನು ಆರಂಭಿಸುತ್ತಾರೆ. ಚಂದ್ರನ ಚಲನೆ ಸೂರ್ಯನ ಚಲನೆಗಿಂತ ವೇಗವಾಗಿರುವುದರಿಂದ ಅವರಿಬ್ಬರ ಅಂತರ ಜಾಸ್ತಿಯಾಗುತ್ತಾ ಹೋಗುತ್ತದೆ. ಈ ಅಂತರವನ್ನು ಅಂಶಗಳ ಲೆಕ್ಕಾಚಾರದಲ್ಲಿ ಗಣನೆಗೆ ತೆಗೆದುಕೊಂಡಾಗ ಒಂದನೆಯ ಹನ್ನೆರಡು ಅಂಶಗಳ ಅಂತರವು ಒಂದನೇ ತಿಥಿಯಾದ ಪ್ರತಿಪತ್/ ಪಾಡ್ಯ ವೆಂತಲೂ ಕರೆಯಲ್ಪಡುತ್ತದೆ. ಚಂದ್ರನು ಈ ಸಂದರ್ಭದಲ್ಲಿ ಬಿಳಿಯಾಗಿ ಕಾಣಲು ಪ್ರಾರಂಭಿಸುತ್ತಾನೆ. ಇದನ್ನು ಪ್ರಥಮ ಕಲೆ ಎಂತಲೂ ಕರೆಯುತ್ತಾರೆ.
ಅಂತರಗಳು ಹೆಚ್ಚಾದಂತೆ ತದಿಗೆ, ಚೌತಿ, ಪಂಚಮಿ, ಷಷ್ಟಿ, ಸಪ್ತಮಿ, ಅಷ್ಟಮಿ, ನವಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಚತುರ್ದಶಿ ತಿಥಿಗಳಾಗುತ್ತದೆ.
ನೂರಅರವತ್ತೆಂಟರಿಂದ ನೂರಎಂಬತ್ತು ಅಂಶಗಳ ಅಂತರವಿರುವಾಗ ಪೂರ್ಣಚಂದ್ರನು ಅಂದರೆ ಹುಣ್ಣಿಮೆಯೂ ಪುನಃ ಮುನ್ನೂರಅರವತ್ತು ಅಂಶಘಳಿಗೆ ಒಗ್ಗೂಡುವ ಸೂರ್ಯಚಂದ್ರರಿಂದ ಉಂಟಾದ ಕತ್ತಲೆಯು ಅಮವಾಸ್ಯಾ ಎಂದು ಕರೆಯಲ್ಪಟ್ಟು ಚಕ್ರದಂತೆ ಸುತ್ತಲು ಆರಂಭವಾಗುತ್ತದೆ. ಇದಕ್ಕೆ ತಿಥಿಚಕ್ರವೆಂದು ಕರೆಯುತ್ತಾರೆ.
ಖಗೋಳ ವಿಜ್ಞಾನದ ಪ್ರಕಾರ ಹಿಂದೂ ಪದ್ದತಿಯಂತೆ ತಿಥಿ ಅಥವಾ ಚಾಂದ್ರದಿನದ ಗಣನೆ ಬಹಳ ಮುಖ್ಯ. ತಿಥಿಯೇ ಎಲ್ಲಾ ಹಬ್ಬ ಹರಿದಿನಗಳನ್ನು ನಿರ್ಧರಿಸುವುತ್ತದೆ. ಹನ್ನೆರಡು ಅಂಶಗಳನ್ನೊಳಗೊಂಡ ೩೦ ತಿಥಿಗಳು ಒಂದು ಚಾಂದ್ರಮಾಸವನ್ನು ಸಂಪೂರ್ಣಗೊಳಿಸುತ್ತದೆ. ಕೆಲವು ವೇಳೆ ಒಂದು ಪಕ್ಷದಲ್ಲಿ ೧೩, ೧೪, ೧೬ ದಿನಗಳು ಬರುವುದು ಉಂಟು. ಪಾಡ್ಯದಿಂದ ಹುಣ್ಣಿಮೆಯವರೆಗೆ ಶುಕ್ಲಪಕ್ಷವೆಂತಲೂ ಪುನಃ ಪಾಡ್ಯದಿಂದ ಅಮಾವಾಸ್ಯೆವರೆಗೆ ಕೃಷ್ಣಪಕ್ಷವೆಂತಲೂ ಕರೆಯಲ್ಪಟ್ಟು ಒಂದು ಚಾಂದ್ರಮಾಸ ಪೂರ್ಣಗೊಳ್ಳುತ್ತದೆ.

ವಾರ:
ಸೂರ್ಯನಿಂದ ಆರಂಭಿಸಿ ಶನಿಯ ತನಕ ಏಳು ಗ್ರಹಗಳು ಅಧಿಪತಿಗಳಾಗಿರುವ ಏಳು ದಿನಗಳೇ ಏಳು ವಾರಗಳು. ಒಂದು ದಿನದ ಸೂರ್ಯೋದಯದಿಂದ ಮರುದಿನದ ಸೂರ್ಯೋದಯದವರೆಗಿನ ಕಾಲವನ್ನು ಇಪ್ಪತ್ತನಾಲ್ಕು ವಿಭಾಗಗಳಾಗಿ ಮಾಡಲಾಗಿದೆ. ಈ ವಿಭಾಗಘಳಿಗೆ ಹೋರಾ ಎಂದು ಹೆಸರು. ಪ್ರತಿಯೊಂದು ವಾರವು ಆರಂಭವಾಗುವ ಕಾಲದಲ್ಲಿರುವ ಹೋರೆಯ ಅಧಿಪತಿ ಆ ವಾರದ ಅಧಿಪತಿಯಾಗಿರುತ್ತಾನೆ.
ಉದಾಹರಣೆಗೆ ಆದಿತ್ಯವಾರವು ಆದಿತ್ಯ ಹೋರೆಯಿಂದ ಆರಂಭವಾಗಿ ಮುಂದಿನ ಸೂರ್ಯೋದಯದ ತನಕ ೨೪ ಹೋರೆಗಳನ್ನು ಒಳಗೊಂಡಿರುತ್ತದೆ. ಸೋಮವಾರವು ಚಂದ್ರ ಹೋರೆಯಿಂದ ಆರಂಭಗೊಳ್ಳುತ್ತದೆ. ಹೀಗೆಯೇ ಮಂಗಳವಾರವು ಬುಧ. ಗುರು, ಶುಕ್ರ, ಶನಿವಾರಗಳು ಮುಂದುವರಿಯುತ್ತದೆ.

ನಕ್ಷತ್ರ; ನಕ್ಷತ್ರ ಪಾದ; ರಾಶಿ; ಸೌರಮಾಸ:
ನಕ್ಷತ್ರವೆನ್ನುವುದು ಪಂಚಾಂಗದ ಮೂರನೆಯ ಅಂಗವಾಗಿದೆ. ಒಟ್ಟು ೨೭ ನಕ್ಷತ್ರಗಳಿದ್ದು ಅಶ್ವಿನಿಯಿಂದ ರೇವತಿಯವರೆಗೆ ನಾಮಾಂಕಿತವಾಗಿದೆ. ಸುಮಾರು ೨೭ ದಿನದಲ್ಲಿ ಚಂದ್ರನು ಆಕಾಶದಲ್ಲಿ ಒಂದು ಸುತ್ತು ಬರುತ್ತಾನೆ. ಆಗ ಅಶ್ವಿನ್ಯಾದಿ ಇಪ್ಪತ್ತೇಳು ನಕ್ಷತ್ರಗಳಲ್ಲಿ ಚಂದ್ರನು ದಿನಕ್ಕೆ ಒಂದೊಂದು ನಕ್ಷತ್ರದ ಸಮೀಪ ಬರುತ್ತಾನೆ. ಚಂದ್ರನ ಸಮೀಪ ನಕ್ಷತ್ರವು ಚಂದ್ರ ನಕ್ಷತ್ರವಾಗಿ ಕರೆಸಿಕೊಳ್ಳುವುದು.
ಮುನ್ನೂರ ಅರವತ್ತು ಅಂಶವಿರುವ ಕಾಂತಿವೃತ್ತವನ್ನು ಇಪ್ಪತ್ತೇಳು ವಿಭಾಗಗಳಾಗಿ ಮಾಡಿ ಒಂದೊಂದು ವಿಭಾಗಕ್ಕೆ ಅಶ್ವಿನ್ಯಾದಿ ಇಪ್ಪತ್ತೇಳು ಹೆಸರುಗಳನ್ನು ಇಟ್ಟರು. ಒಂದೊಂದು ವಿಭಾಗಕ್ಕೂ ಹದಿಮೂರು ಅಂಶ ಮತ್ತು ಇಪ್ಪತ್ತು ಕಲೆಗಳಿರುವುವು. ಈ ವಿಭಾಗಾತ್ಮಕವಾದ ಒಂದೊಂದು ನಕ್ಷತ್ರವನ್ನು ಅಂದರೆ ಹದಿಮೂರು ಅಂಶ ಮತ್ತು ಇಪ್ಪತ್ತು ಕಲೆಗಳನ್ನು ನಾಲ್ಕು ಪಾಲು ಮಾಡಿದಾಗ ಪ್ರತಿಯೊಂದು ಪಾಲಿಗೆ ಮೂರು ಅಂಶ ಮತ್ತು ಇಪ್ಪತ್ತು ಕಲೆಗಳು ಆಗುವುವು. ಇದನ್ನು ನಕ್ಷತ್ರ ಪಾದವೆಂದು ಕರೆಯುತ್ತಾರೆ.
ಈ ರೀತಿಯ ನಕ್ಷತ್ರ ಪಾದಗಳಲ್ಲಿ ಒಂಭತ್ತು ಪಾದಘಳಿಗೆ ಒಂದು ರಾಶಿ ಅಥವಾ ಎರಡು ಕಾಲು ನಕ್ಷತ್ರಕ್ಕೆ ಒಂದು ರಾಶಿಯಾಗುವುದು.
ಒಂದು ರಾಶಿಯೆಂದರೆ ಮೂವತ್ತು ಅಂಶಗಳು. ಹನ್ನೆರಡು ರಾಶಿಘಳಿಗೆ ಮುನ್ನುರರವತ್ತು ಅಂಶಗಳಾಗುವುವು. ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ,ಕುಂಭ, ಮೀನಗಳೆಂದು ಹನ್ನೆರಡು ರಾಶಿಗಳು ಹೆಸರಿಸಲ್ಪಟ್ಟಿದೆ.
ಚಂದ್ರನಿರುವ ನಕ್ಷತ್ರವು ನಿತ್ಯ ನಕ್ಷತ್ರವಾದರೆ ಸೂರ್ಯನೀರುವ ನಕ್ಷತ್ರವು ಮಹಾನಕ್ಷತ್ರವೆನಿಸುವುದು, ಸೂರ್ಯನು ಸುಮಾರು ಹದಿಮೂರುವರೆ ದಿನಗಳಲ್ಲಿ ಒಂದು ನಕ್ಷತ್ರದಿಂದ ಮತ್ತೊಂದು ನಕ್ಷತ್ರಕ್ಕೆ ಸಂಚರಿಸುವನು.
ಸೂರ್ಯನು ಕ್ರಾಂತಿ ವೃತ್ತದಲ್ಲಿ ಮೇಷ ರಾಶಿಯನ್ನು ಮೊದಲುಗೊಂಡು , ಹನ್ನೆರಡು ರಾಶಿಗಳಲ್ಲಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ದಾಟುವ ಕಾಲವನ್ನು ಸಂಕ್ರಮಣ ಅಥವ ಸಂಕ್ರಾಂತಿ ಎಂದು ಕರೆಯುತ್ತಾರೆ.
ಸೂರ್ಯನು ಮಂದಗತಿಯಲ್ಲಿದ್ದರೆ ಅವನಿಗೆ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಸುಮಾರು ಮೂವತ್ತು, ಮೂವತ್ತೊಂದು ಅಥವಾ ಮೂವತೆರಡು ದಿನಗಳು ಬೇಕಾಗುತ್ತದೆ. ಅವನು ಶೀಘ್ರಗತಿಯಲ್ಲಿದ್ದರೆ, ಅವನಿಗೆ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಇಪ್ಪತ್ತೊಂಬತ್ತು ದಿನಗಳು ಬೇಕಾಗುತ್ತದೆ.
ಸೂರ್ಯನು ಒಂದು ರಾಶಿಯಲ್ಲಿರುವಷ್ಟು ಕಾಲ ಒಂದು ಸೌರಮಾಸವಾಗುವುದು. ಇಂತಹ ೧೨ ಸಂಕ್ರಮಣಗಳಿಂದ (ಮೇಷ, ವೃಷಭ ….) ೧೨ ಸೌರಮಾಸಗಳಾಗುವುವು. ೧೨ ಸೌರಮಾಸಗಳಿಂದ ಒಂದು ಸೌರವರ್ಷವಾಗುವುದು.
ಸೂರ್ಯನ ಗತಿಯಲ್ಲಿ ದಿಕ್ಕು ಬದಲಾವಣೆಯಾಗುವುದರಿಂದ ಕರ್ಕಟಾ (ದಕ್ಷಿಣಾಯಣ) ಮತ್ತು ಮಕರ (ಉತ್ತರಾಯಣ) ಸಂಕ್ರಮಣಗಳನ್ನು ವಿಶೇಷವಾಗಿ ಪರಿಗ್ರಹಿಸುವರು.

ಯೋಗ:
ಇಪ್ಪತ್ತೇಳು ನಕ್ಷತ್ರದಂತೆಯೇ ಇಪ್ಪತ್ತೇಳು ಯೋಗಗಳಿರುತ್ತದೆ. ಹದಿಮೂರು ಅಂಶ ಮತ್ತು ಇಪ್ಪತ್ತು ಕಲೆಗಳನ್ನು ಕಾಂತಿವೃತ್ತದಲ್ಲಿರುವ ಮುನ್ನೂರ ಅರವತ್ತು ಅಂಶಗಳನ್ನು ವಿಭಜಿಸಿದ್ದಲ್ಲಿ ೨೭ ಯೋಗಗಳಾಗುತ್ತವೆ. ಯೋಗ ವೆಂದರೆ ಒಗ್ಗೂಡುವಿಕೆ ಎಂದರ್ಥ. ಸೂರ್ಯ ಚಂದ್ರರ ಗತಿಯನ್ನು ಒಟ್ಟೂ ಸೇರಿಸಿದರೆ ಆಗುವುದು ಯೋಗ. ಈ ಒಟ್ಟುಗೂಡುವಿಕೆಯು ೧೩ ಅಂಶ ಮತ್ತು ೨೦ ಕಲೆಗಳಾಗುತ್ತದೆ.

ಕರಣ:
ಇದು ಪಂಚಾಂಗದ ೫ನೇ ಅಂಗ. ತಿಥಿಯ ಅರ್ಧಭಾಗ ಕರಣವಾಗಿರುತ್ತದೆ. ಶುಕ್ಲಪಕ್ಷದ ಪಾಡ್ಯದಿಂದ ಕೃಷ್ಣಪಕ್ಷದ ಅಮಾವಾಸ್ಯೆಯವರೆಗೆ ೩೦ ತಿಥಿಗಳಿರುತ್ತದೆ. ತಿಥಿಯ ಅರ್ಧ ಭಾಗ ಕರಣವೆನಿಸಿದಾಗ ಅರವತ್ತು ಕರಣಗಳಿರುತ್ತದೆ. ಆದರೆ ೬೦ ಕರಣಘಳಿಗೆ ಪ್ರತ್ಯೇಕ ಹೆಸರು ಇರುವುದಿಲ್ಲ. ಕರಣಗಳಿರಿವುದು ೧೧ ಮಾತ್ರ. ಶುಕ್ಲಪಕ್ಷದ ಪಾಡ್ಯದ ಉತ್ತರಾರ್ಧದಿಂದ ಆರಂಭಿಸಿ ಕೃಷ್ಣಪಕ್ಷದ ಚತುರ್ದಶಿಯ.ಪೂರ್ವಾರ್ಧದ ಅಂತ್ಯದ ತನಕ ಬವ, ಬಾಲವ ಕೌಲವ, ತೈತಿಲ, ಗರಜೆ, ವಣಜೆ ಮತ್ತು ಭದ್ರಾಗಳೆಂಬ ಏಳು ಕರಣಗಳು ಅನುಕ್ರಮವಾಗಿ ಎಂಟು ಸಲಪರಿವರ್ತಿಸಿ ಬರುತ್ತದೆ. ಈ ಕಾರಣದಿಂದ ಇವುಘಳಿಗೆ ಚರಕರಣಗಳೆಂದು ಪೆಸರು. ಶುಕ್ಲ ಪ್ರಥಮ ತಿಥಿಯ ಮೊದಲ ಭಾಗ (ಮೊದಲ ಅರ್ಧಭಾಗ) ಕಿಂಸ್ತುಘ್ನವೆಂಬ ಕರಣ. ಕೃಷ್ಣ ಚತುರ್ದಶಿಯ ಉತ್ತರಾರ್ಧದ ಆರಂಭದಿಂದ (ಎರಡನೆಯ ಅರ್ಧ) ಶಕುನಿ ಎಂಬ ಕರಣ. ಅಮಾವಾಸ್ಯೆಯ ಪೂರ್ವಾರ್ಧ ಮತ್ತು ಉತ್ತರಾರ್ಧಗಳಲ್ಲಿ ಚತುಷ್ಪಾತ್ ಮತ್ತು ನಾಗವಾನ್ ಎಂಬ ಕರಣಗಳಿವೆ. ಇವು ತಿಂಗಳೊಂದರ ಒಳಗೆ ಪುನರಾವರ್ತಿಸದಿರುವುದರಿಂದ ಸ್ಥಿರಕರಣಗಳು. ಏಳು ಚರಣಗಳ ಎಂಟು ಆವರ್ತನೆಗೆ ಐವತ್ತಾರು ಕರಣಗಳು ಆಗುತ್ತದೆ. ಇದಕ್ಕೆ ನಾಲ್ಕು ಸ್ಥಿರ ಕರಣಗಳನ್ನು ಸೇರಿಸಿದಾಗ ಮೂವತ್ತು ತಿಥಿಗಳಲ್ಲಿ ಒಂದು ತಿಂಗಳಲ್ಲಿ ಅರವತ್ತು ಕರಣಗಳಾಗುವುವು.

ವಿಷ ಮತ್ತು ಅಮೃತ:
ಪಂಚಾಂಗದಲ್ಲಿ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣಗಳೆಂಬ ಐದು ಅಂಗಗಳನ್ನು ನಮೂದಿಸಿದ ನಂತರ ವಿಷ ಅಮೃತಗಳ ತಿಳುವಳಿಕೆಯು ಮುಖ್ಯವಾಗಿದೆ. ಪ್ರತಿ ನಕ್ಷತ್ರದಲ್ಲಿಯೂ ನಿರ್ದಿಷ್ಟ ಘಟಿಗಳು ಕಳೆದ ಆನಂತರದ ನಾಲ್ಕು ಘಟಿಘಳಿಗೆ ವಿಷಕಾಲವೆಂಬ ಸಂಜ್ಞೆಯಿದೆ. ಇದನ್ನು ವಿಷ ಎನ್ನುತ್ತಾರೆ. ಅಂತಯೇ ನಿರ್ದಿಷ್ಟ ಘಟಿಗಳು ಕಳೆದ ಆನಂತರದ ನಾಲ್ಕು ಘಟಿಗಳ ಕಾಲವನ್ನು ಅಮೃತ ಅಥವಾ ಅಮೃತಕಾಲವೆನ್ನುತ್ತಾರೆ.
ಇದು ಆಯಾ ನಕ್ಷತ್ರದ ಪರಮ ಘಟಿಯು ಅರವತ್ತು ಇದ್ದಾಗಿನ ಲೆಕ್ಕಾಚಾರ. ಪರಮಘಟಿಯಲ್ಲಿ ಹೆಚ್ಚು ಕಡಿಮೆಯಾದಾಗ ತ್ರೈರಾಶಿಕ ವಿಧಾನದಿಂದ ವಿಷ ಮತ್ತು ಅಮೃತ ಕಾಲವನ್ನು ನಿರ್ಧರಿಸಲಾಗುವುದು. ಕೆಲವು ಪಂಚಾಂಗದಲ್ಲಿ ವಿಶೇ, ಅಶೇ ಎಂದು ಬರೆದಿರುತ್ತದೆ. ಇವುಘಳಿಗೆ ವಿಷ ಶೇಷ, ಅಮೃತ ಶೇಷವೆಂದು ಅರ್ಥ. ವಿಷಕಾಲವು ದೋಷಗಳಲ್ಲಿ ಸೇರಿರುವುದರಿಂದ ಶುಭ ಕಾರ್ಯಘಳಿಗೆ ವರ್ಜ್ಯವಾದುದು ಮತ್ತು ಅಮೃತಕಾಲವು ಯೋಗ್ಯವಾಗಿರುತ್ತದೆ.