Menu

ಮೊಗೇರಿ ಪಂಚಾಂಗ ಬೆಳೆದು ಬಂದ ದಾರಿ

ಮೊಗೇರಿ ಪಂಚಾಂಗವು 1902-1903ರ ಶುಭಕೃತ್ ಸಂವತ್ಸರದಲ್ಲಿ ಆರಂಭಗೊಂಡು ಈಗ ಪ್ಲವ ಸಂವತ್ಸರದ (2021-22) ಪ್ರಕಟಣೆಯೊಂದಿಗೆ ಎರಡನೇ ಸಂವತ್ಸರ ಚಕ್ರವನ್ನು ಪೂರ್ಣಗೊಳಿಸಿ, 120 ವರುಷಗಳನ್ನು ಕ್ರಮಿಸಿ 121ನೇ ವಸಂತಕ್ಕೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ.

ದಿವಂಗತ ವೇದಮೂರ್ತಿ ಬ್ರಹ್ಮಶ್ರೀ ಸಿದ್ದಾಂತ ಮೊಗೇರಿ ರಾಮಪ್ಪ ಅಡಿಗಳಿಂದ ಆರಂಭಗೊಂಡ ಪಂಚಾಂಗವು ಅವರ ಸಹೋದರರಾದ ದಿವಂಗತ ವೇದಮೂರ್ತಿ ಸುಬ್ರಾಯ ಅಡಿಗ, ವೇದಮೂರ್ತಿ ಬ್ರಹ್ಮಶ್ರೀ ಭಾಸ್ಕರ ಅಡಿಗ, ವೇದಮೂರ್ತಿ ಬ್ರಹ್ಮಶ್ರೀ ಪದ್ಮನಾಭ ಅಡಿಗಳ ವಿಶೇಷ ಸಹಕಾರದಿಂದ ಕರ್ನಾಟಕದ ಮೂಲೆ ಮೂಲೆಗೆ ತಲುಪಲು ಕಾರಣವಾಯಿತು. ಸೂರ್ಯಸಿದ್ದಾಂತ ರೀತ್ಯಾ ಗುಣಿಸಿ ಪರಿಶೋಧಿಸಲ್ಪಟ್ಟು ಪ್ರಕಟಿಸಲ್ಪಟ್ಟಿತು.
ಕಳೆದ 30 ವರುಷಗಳಿಂದ ಅಚಲ ಶ್ರದ್ಧೆಯಿಂದ ಮೊಗೇರಿ ಶ್ರೀ ಶಂಕರನಾರಾಯಣ ಅಡಿಗರು ತಮ್ಮ ದಿವಂಗತ ಬ್ರಹ್ಮಶ್ರೀ ಸಿದ್ಧಾಂತಿ ವೇದಮೂರ್ತಿ ಬಾಲಚಂದ್ರ ಅಡಿಗಳ ಸಹಕಾರದಿಂದ ಪಂಚಾಂಗ ಪ್ರಕಟನಾ ಕೆಲಸವನ್ನು ನಡೆಸಿಕೊಂಡು ಬರುತ್ತಿದ್ದರು. ಈಗ ಕಳೆದೆರಡು ವರುಷಗಳಿಂದ ಪಂಚಾಂಗ ಪ್ರಕಟನೆಯನ್ನು ಮುಂದುವರಿಸುತ್ತಿರುವುದಲ್ಲದೇ ಈಗ ತಮ್ಮದೇ ಆದ ಅಂತರ್ಜಾಲವನ್ನು ಸಿದ್ಧಪಡಿಸಿದ್ದಾರೆ. ಇಳಿವಯಸ್ಸಿನಲ್ಲಿಯೂ ಉತ್ಸಾಹದ ಚೇತನವಾಗಿರುವ ವೇದಮೂರ್ತಿ ಶಂಕರನಾರಾಯಣ ಅಡಿಗರು ಈ ಅಂತರ್ಜಾಲದ ಪ್ರಕಟನೆಗೆ ಮುಖ್ಯ ರುವಾರಿಯಾಗಿದ್ದಾರೆ.
ಮೊಗೇರಿ ಪಂಚಾಂಗದ ಉಗಮ ಮತ್ತು ಬೆಳೆದು ಬಂದ ಪರಂಪರೆ ಒಂದು ವಿಶಿಷ್ಟ ಹಿನ್ನೆಲೆಯನ್ನು ಹೊಂದಿದೆ. ದಿವಂಗತ ಅಡಿಗ ಸಹೋದರರ ಸೋದರಮಾವನವರಾದ ದಿವಂಗತ ಶ್ರೀ ವೆಂಕಟರಮಣ ಹೆಬ್ಬಾರ್ ಬವಲಾಡಿ (ಕವಿ ಮುದ್ದಣ್ಣನ ಗುರು) ಇವರಿಂದ ಸಾಹಿತ್ಯ, ವೇದ, ಯಕ್ಷಗಾನ ಕಲೆಯನ್ನು ವಂಶವಾಹಿನಿಯಾಗಿ ಪಡೆದುಕೊಂಡಿರುವುದಲ್ಲದೆ, ವೃತ್ತಿಪರಂಪರೆಯಾಗಿ ಊರ ಜೋಯಿಸಿಕೆಯಿಂದ ಆರಂಭಗೊಂಡು ಪಂಚಾಂಗ ಗಣಿತದಂತಹ ಖಗೋಲ ವಿಜ್ಞಾನದ ವಿಷಯವು ಆಸಕ್ತಿ ಕೇಂದ್ರವಾಗಿ ಬೆಳೆದು ಬಂತು.
ಸತತ ಅಭ್ಯಾಸಿಗಳಾಗಿದ್ದ ದಿವಂಗತ ವೇ. ರಾಮಪ್ಪ ಅಡಿಗಳು ಪಂಚಾಂಗದ ಗಣಿತ ಪದ್ಧತಿಗಳನ್ನು ಆಳವಾಗಿ ಅಭ್ಯಸಿಸಿದ್ದರು. ಪಂಚಾಂಗಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ಪ್ರಕಟಿಸಿದ್ದರು. ಅವರ ಸಹೋದರರಾದ ದಿವಂಗತ ವೇ. ಭಾಸ್ಕರ ಅಡಿಗರು, ವಿದ್ವತ್ ವಲಯದಲ್ಲಿ ಪುರಸ್ಕೃತಗೊಂಡಿರುವುದಲ್ಲದೇ ಸಿದ್ಧಾಂತ ಕೇಸರಿ ದೈವಜ್ಞ ಪಂಚಾನನ, ವಿದ್ಯಾಭೂಷಣ ಇತ್ಯಾದಿ ಬಿರುದುಗಳಿಂದ ಸನ್ಮಾನಿತರಾಗಿದ್ದರು. ಜೋತಿಷ ಶಾಸ್ತ್ರದಲ್ಲಿ ಅಪ್ರತಿಮ ಹೆಸರುಗಳಿದ್ದ ಇನ್ನೋರ್ವ ಸಹೋದರ ದಿವಂಗತ ವೇ. ಪದ್ಮನಾಭ ಅಡಿಗಳು ಶಿವಾಜಿ ವಿಜಯ ಎನ್ನುವ ಯಕ್ಷಗಾನ ಪ್ರಸಂಗ ರಚಿಸಿರುವುದಲ್ಲದೇ ಖಗೋಲವಿಜ್ಞಾನದಲ್ಲಿ ವಿಶೇಷ ಪರಿಣತಿ ಹೊಂದಿ ವಿಜ್ಞಾನಿಗಳೊಂದಿಗೆ ಸಂವಾದಿಸುತ್ತಿದ್ದುರು, ಸರಳ ಗಣಿತ ಪದ್ಧತಿಗಳ ಅನ್ವೇಷಕರಾಗಿದ್ದರು. ಆಯುರ್ವೇದ ಔಷಧಗಳ ತಜ್ಞರಾಗಿದ್ದರು.
ಸಹಸ್ರಾರು ಅಭಿಮಾನಿಗಳನ್ನು ಹೊಂದಿರುವ ಮೊಗೇರಿ ಪಂಚಾಂಗಕ್ಕೆ 120 ಯುಗಾದಿಗಳನ್ನು ಕಳೆದ ಸಂಭ್ರಮ. ನಾಡಿನ ವಿದ್ವಾಂಸರುಗಳಿಂದ ಧಾರ್ಮಿಕ ವಿಚಾರಗಳ ಬಗ್ಗೆ ತ್ವರಿತಗತಿಯಲ್ಲಿ ಮಾಹಿತಿಯನ್ನು ಕೊಡುವುದಲ್ಲದೇ, ಅಭಿಮಾನಿ ಬಳಗದ ಡಾಟಾಬೇಸನ್ನು ತಯಾರಿಸಿ ಹೆಚ್ಚಿನ ಪಂಚಾಂಗ ಮಾಹಿತಿ ಮತ್ತು ಧಾರ್ಮಿಕ ವಿಚಾರಗಳನ್ನು ಪ್ರಕಟಿಸಿ ಸಂಪರ್ಕ ಹೊಂದುವುದು ನಮ್ಮ ಮುಖ್ಯ ಉದ್ದೇಶವಾಗಿರುತ್ತದೆ. ಅಭಿಮಾನಿ ಬಳಗದ ಆಶೀರ್ವಾದ, ಅಭಿಪ್ರಾಯ ಸದಾ ಬೆಂಬಲವನ್ನು ನಿರೀಕ್ಷಿಸುತ್ತಾ ಪ್ಲವ ಸಂವತ್ಸರದ ಪಂಚಾಂಗವನ್ನು ಮುಂದಿಡುತ್ತಿದ್ದೇವೆ.
ಪ್ರಕಟನೆ ವಿವರಗಳು:
ಶಾಲಿವಾಹನ ಶಕವರ್ಷ ೧೯೪೪
ಸಂವತ್ಸರ ಪ್ಲವ
ವರ್ಷ 2021-2022
ಸೃಷ್ಟ್ಯಾ ದಿಗತಾಬ್ದಾ: ೧೯೫, ೫೮, ೮೫, ೧೨೨
ಕಲಿಗತಾಬ್ದಾ ೫೧೨೨
ವಿಕ್ರಮಾರ್ಕಜತಾಬ್ದಾ: ೨೦೭೭ – ೨೦೭೮
ಫಸಲಿ ೧೪೩೦ – ೧೪೩೧
ಪಂಚಾಂಗಕರ್ತರು ಮತ್ತು ಪ್ರಕಾಶಕರು ಅನುಪಮ ಅಡಿಗ
ಮೊಗೇರಿ ವಿಳಾಸ ಜನಾರ್ದನ ಅಡಿಗ
ಜೋತಿಷ್ಯ ಶಿರೋಮಣಿ ವಿದ್ವಾನ್
ಮೊಗೇರಿ ಅಂಚೆ: ಕೆರೆಗಾಲು
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ 576219
ಬೆಂಗಳೂರು ವಿಳಾಸ ನಂ. 3, ಶ್ರೀ ಪದ್ಮನಾಭ ನಿಲಯ
ಶಾರದಾಂಬ ಕ್ರಾಸ್, ಮುನಿಸ್ವಾಮಪ್ಪ ಗಾರ್ಡನ್,
ಕೋಣನಕುಂಟೆ ಅಂಚೆ, ಚುಂಚಘಟ್ಟ ಮುಖ್ಯರಸ್ತೆ
ಬೆಂಗಳೂರು – 62
ಸಂಪರ್ಕ mogeripanchangam@gmail.com
ಹಕ್ಕುಗಳು ಪ್ರಕಾಶಕರದ್ದು